24/04/2024
ಕೋಮುವಾದಿ ಬಿಜೆಪಿ ಮತ್ತು ಅವರ ಮಿತ್ರ ಅವಕಾಶವಾದಿ ಜೆಡಿ(ಎಸ್) ಸೋಲಿಸಲು
ಜನಪರ ಪರ್ಯಾಯ, ಜಾತ್ಯಾತೀತ ನೀತಿಗಳ ಹೊಸ ಸರ್ಕಾರ ರಚಿಸಲು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಇಂಡಿಯಾ ಕೂಟದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡರನ್ನು ಬೆಂಬಲಿಸಲು CWFI_CITU ತೀರ್ಮಾನಿಸಿದೆ. ಕಳೆದ ಹತ್ತು ವರ್ಷಗಳಿಂದ ಬಡವರ ಬದುಕನ್ನು ಬೀದಿಗೆ ಎಸೆದು ಬಂಡವಾಳದಾರ ಶ್ರೀಮಂತರನ್ನು ಪಲ್ಲಕ್ಕಿಯಲ್ಲಿ ಹೊತ್ತು ತಿರುಗಾಡಿದ ಮೋದಿ ಸರ್ಕಾರವನ್ನು ಇಡೀ ದೇಶದ ಜನರೊಡಗೂಡಿ ಮಂಡ್ಯ ಜಿಲ್ಲೆಯ ಜನ ಸೋಲಿಸಬೇಕು. ಕೇವಲ ಒಂದೆರಡು ಲೋಕಸಭಾ ಸ್ಥಾನಕ್ಕಾಗಿ ಜಾತ್ಯಾತೀತ ತತ್ವಗಳಿಗೆ ಎಳ್ಳು ನೀರು ಬಿಟ್ಟು, ನಾಡಿನ ಜನತೆಗೆ ವಿಶ್ವಾಸದ್ರೋಹ ಬಗೆದ ಅವಕಾಶವಾದಿ ಜೆಡಿ(ಎಸ್) ಪಕ್ಷಕ್ಕೂ ಪಾಠ ಕಲಿಸಬೇಕೆಂದು ಮನವಿ ಮಾಡುತ್ತದೆ.
ಬಂಡವಾಳಶಾಹಿ ಶ್ರೀಮಂತರ ಬಾಲಂಗೋಚಿಯಾಗಿರುವ ಮೋದಿ ಮತ್ತವರ ಮಿತ್ರರನ್ನು ಸೋಲಿಸದಿದ್ದರೆ ಭಾರತದ ಭವಿಷ್ಯ, ಭಾರತೀಯರ ಭವಿಷ್ಯ ಸಂಕಷ್ಟಕ್ಕೆ ಸಿಲುಕಲಿದೆ. ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಅಗತ್ಯ ವಸ್ತುಗಳು ಗಗನ ಕುಸುಮವಾಗುತ್ತವೆ, ರೈತರ ಭೂಮಿ ಕಂಪನಿಗಳ ಪಾಲಾಗುತ್ತದೆ, ಉದ್ಯೋಗ ಖಾತರಿ ಯೋಜನೆ ನಿಂತುಹೋಗುತ್ತದೆ, ರೈಲ್ವೆ, ವಿದ್ಯುತ್, ವಿಮೆ, ಬ್ಯಾಂಕ್ನಂತಹ ಸಾರ್ವಜನಿಕ ಆಸ್ತಿ ಕಾರ್ಪೋರೆಟ್ ಕಂಪನಿಗಳ ಕೈಸೇರಲಿದೆ. ಹಾಗಾಗಿ ಭಾರತೀಯರ ಬದುಕು ಮತ್ತು ಭವಿಷ್ಯವನ್ನು ಕಾಪಾಡಿಕೊಳ್ಳುವ ಚುನಾವಣಾ ಸಮರದಲ್ಲಿ ಮಂಡ್ಯ ಜಿಲ್ಲೆಯ ಜನತೆ ನಿರ್ಣಾಯಕ ಪಾತ್ರ ವಹಿಸಿ ಬಿಜೆಪಿ ಮತ್ತವರ ಮಿತ್ರರನ್ನು ಸೋಲಿಸಲೇಬೇಕಿದೆ.
ಬೆಲೆ ಇಳಿಸದ, ಬೆಲೆ ಏರಿಸಿದ ಸರ್ಕಾರ:
2014 ರಲ್ಲಿ ಮೋದಿಯವರು ಚುನಾವಣಾ ಪ್ರಚಾರ ಮಾಡುವಾಗ ದಿನಬಳಕೆ ವಸ್ತುಗಳ ಬೆಲೆ ಇಳಿಸುವುದಾಗಿ ಅಬ್ಬರಿಸಿದ್ದರು. ಆದರೆ ಈ ಹತ್ತು ವರ್ಷಗಳಲ್ಲಿ ಎಲ್ಲಾ ವಸ್ತುಗಳ ಬೆಲೆ ಎರಡು ಪಟ್ಟಾಗಿದೆ. ಬಿಜೆಪಿ ಸರ್ಕಾರ ಬೆಲೆ ಇಳಿಸದಿದ್ದರೂ ಹೋಗಲಿ ಏರಿಸದಿದ್ದರೆ ಸಾಕಾಗಿತ್ತು ಎನ್ನುವಂತಾಗಿದೆ. ಪೆಟ್ರೋಲ್ ಬೆಲೆ 64 ರಿಂದ 102 ಕ್ಕೆ, ಡೀಸೆಲ್ ಬೆಲೆ 50 ರಿಂದ 88 ಕ್ಕೆ, ಗ್ಯಾಸ್ ಬೆಲೆ 410 ರಿಂದ 1000 ಕ್ಕೆ ಹೆಚ್ಚಿತು. ಜಿಎಸ್ಟಿ ತೆರಿಗೆಯಿಂದ ಶಿಕ್ಷಣ, ಆರೋಗ್ಯ, ರಸಗೊಬ್ಬರ, ಔಷಧಿ ಯಾವುದೂ ಜನರ ಕೈಗೆಟಕುತ್ತಿಲ್ಲ. ಕೂಲಿ ಹೆಚ್ಚದೆ, ರೈತರ ಬೆಳೆಗಳಿಗೆ ಬೆಲೆ ಹೆಚ್ಚದೆ ಬರೀ ಬೆಲೆಯೇರಿಕೆ ಜನರನ್ನು ಬಿಕಾರಿ ಮಾಡಿದೆ.
ಹೆಚ್ಚದ ರೈತರ ಆದಾಯ - ಖಾತ್ರಿಯಾಗದ ಬೆಂಬಲ ಬೆಲೆ:
ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವ ಸುಳ್ಳು ಹೇಳಿ 2014ರಲ್ಲಿ ಮೋದಿ ಅಧಿಕಾರ ಹಿಡಿದರು. ನಂತರ ಮಾಡಿದ್ದೇನು? ಬೆಂಬಲ ಬೆಲೆ ಕಾನೂನು ತರಲಿಲ್ಲ ಬದಲಿಗೆ ಕೃಷಿಯನ್ನು, ಕೃಷಿ ಭೂಮಿಯನ್ನು ಕಂಪನಿಗಳಿಗೆ ಕೊಡಲು ಕಾನೂನು ತಂದರು!! ಕಾನೂನು ಹಿಂಪಡೆಯಲು ಮತ್ತು ಬೆಂಬಲ ಬೆಲೆ ಕಾನೂನಿಗಾಗಿ ಹೋರಾಡಿದ ರೈತರ ಮೇಲೆ ಹಿಂಸೆಯ ದಾಳಿ ನಡೆಸಿದರು. ದೆಹಲಿಗೆ ಹೊರಟ ಅನ್ನದಾತರ ಹಾದಿಗೆ ಮೊಳೆ ಜಡಿದರು, ಟಿಯರ್ ಗ್ಯಾಸ್ ಸಿಡಿಸಿದರು, ರಬ್ಬರ್ ಗುಂಡು ಹೊಡೆದರು. ಒಂದು ವರ್ಷ ಚಳವಳಿ ಮಾಡಿದ ರೈತರು ಮೋದಿಯವರ ಸರ್ಕಾರವನ್ನು ಸೋಲಿಸಿ ಕೃಷಿ ಕಾಯ್ದೆಗಳನ್ನೇನೋ ರದ್ದುಪಡಿಸಿದರು ಆದರೆ ಅದಕ್ಕಾಗಿ 750 ಅನ್ನದಾತರು ಪ್ರಾಣ ಕೊಡಬೇಕಾಯಿತು.
ದುರ್ಬಲಗೊಂಡ ಉದ್ಯೋಗ ಖಾತರಿ ಯೋಜನೆ:
ನಿರುದ್ಯೋಗಿ ಗ್ರಾಮೀಣ ಜನತೆಗೆ ಉದ್ಯೋಗ ಖಾತರಿ ಯೋಜನೆ ಸಂಜೀವಿನಿಯಾಗಿತ್ತು. ಕಮ್ಯುನಿಸ್ಟರ ಒತ್ತಾಯದಿಂದ ಜಾರಿಗೆ ತಂದಿದ್ದ ಈ ಯೋಜನೆಗೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನಿರಂತರವಾಗಿ ಅನುದಾನ ಕಡಿತ ಮಾಡುತ್ತಿದೆ. 2021 - 22ರಲ್ಲಿ 98,000 ಕೋಟಿ ರೂಪಾಯಿ ಇದ್ದ ಅನುದಾನ 2023 - 24ರಲ್ಲಿ 60,000 ಕೋಟಿಗೆ ಇಳಿದಿದೆ. ಇದರಿಂದಾಗಿ ಕೆಲಸ ಕೇಳಿದ ಕೂಲಿಕಾರರಿಗೆ ಕೆಲಸ ಕೊಡುತ್ತಿಲ್ಲ, ಕೆಲಸ ಮಾಡಿದವರಿಗೆ ಕೂಲಿ ಕೊಡುತ್ತಿಲ್ಲ. ಕೂಲಿ ಪಡೆಯಲು ಆಧಾರ್ ಜೋಡಿಸುವ ಕಾನೂನು ತಂದು 10 ಕೋಟಿ ಕೂಲಿಕಾರರ ಕೆಲಸದ ಹಕ್ಕನ್ನೇ ಕಿತ್ತುಕೊಳ್ಳಲಾಗಿದೆ.
ಬಿಜೆಪಿ ಎಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ಬಿಜೆಪಿ:
ಚುನಾವಣಾ ಬಾಂಡ್ ಹೆಸರಿನ ಭ್ರಷ್ಟಾಚಾರ ಜಗಜ್ಜಾಹೀರಾಗಿದೆ. ಹೆದರಿಸಿ, ಬೆದರಿಸಿ ಸುಲಿಗೆ ಮಾಡುವ ಕಾರಣದಿಂದಲೇ ಚುನಾವಣಾ ಬಾಂಡ್ ತರಲಾಗಿತ್ತು. ಈ ಬಾಂಡ್ ಹೆಸರಿನಲ್ಲಿ ಬಿಜೆಪಿ 8500 ಕೋಟಿ ರೂಪಾಯಿ ಸುಲಿಗೆ ಮಾಡಿದೆ. ಕೆಲವು ಕಂಪನಿಗಳು ಮತ್ತು ವ್ಯಕ್ತಿಗಳನ್ನು ಇಡಿ, ಸಿಬಿಐ ಮೂಲಕ ಬೆದರಿಸಿ ಬಾಂಡ್ ಹೆಸರಿನ ವಸೂಲಿ ಮಾಡಿದರೆ, ಇನ್ನೂ ಕೆಲವರಿಗೆ ದೊಡ್ಡ ಮಟ್ಟದ ಸರ್ಕಾರದ ಕಾಮಗಾರಿಗಳ ಗುತ್ತಿಗೆ ನೀಡಿ ವಸೂಲಿ ಮಾಡಲಾಗಿದೆ. ಅಸ್ತಿತ್ವದಲ್ಲೇ ಇಲ್ಲದ ಕಂಪನಿಗಳು ಬಿಜೆಪಿಗೆ ಸಾವಿರಾರು ಕೋಟಿ ರೂಪಾಯಿ ದೇಣಿಗೆ ನೀಡಿವೆ!! ಇದು ಬ್ರಹ್ಮಾಂಡ ಭ್ರಷ್ಟಾಚಾರದ ಒಂದು ತುಣುಕು ಮಾತ್ರ!! ಬಗೆದರೆ ಭ್ರಷ್ಟಾಚಾರದ ಗಣಿಯೇ ಬಿಜೆಪಿಯಲ್ಲಿ ಸಿಗುತ್ತದೆ. ಬೇರೆ ಪಕ್ಷಗಳಲ್ಲಿ ಇದ್ದ ಭ್ರಷ್ಟರೆಲ್ಲ ಬಿಜೆಪಿ ಎಂಬ ವಾಷಿಂಗ್ ಮೆಷಿನ್ ಹೊಕ್ಕ ತಕ್ಷಣ ಪರಮ ಪ್ರಮಾಣಿಕರಾಗಿಬಿಡುವುದೇ ಒಂದು ಸೋಜಿಗ!!! ಬಿಜೆಪಿಗೆ ಬಗ್ಗದವರನ್ನು ಏನಾದರೂ ಮಾಡಿ ಜೈಲಿಗೆ ಹಾಕಲಾಗುತ್ತದೆ!! CPIM ಸುಪ್ರೀಂ ಕೋರ್ಟಿನಲ್ಲಿ ಹೂಡಿದ ದಾವೆಯಿಂದಾಗಿ ಚುನಾವಣಾ ಬಾಂಡ್ ಯೋಜನೆ ಸಂವಿಧಾನ ಬಾಹಿರ ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ.
ಬಡವರು - ಶ್ರೀಮಂತರ ನಡುವೆ ಹೆಚ್ಚಿದ ಅಂತರ:
ವಿಶ್ವ ಅಸಮಾನತೆ ವರದಿಯ ಪ್ರಕಾರ 2022ರಲ್ಲಿ ಭಾರತ "ಬಡವರ ಮತ್ತು ಅತ್ಯಂತ ಅಸಮಾನ ದೇಶ". ಮೋದಿ ನೇತೃತ್ವದ ಬಿಜೆಪಿ ಆಡಳಿತದಲ್ಲಿ ನಮ್ಮ ದೇಶದ ಸಾಮಾನ್ಯರ ಆಸ್ತಿ ಬಂಡವಾಳದಾರರ ಪಾಲಾಗುತ್ತಿದೆ. ಮೇಲಿನ ಶ್ರೀಮಂತ 10% ಜನರ ಬಳಿ ದೇಶದ 77% ಆಸ್ತಿ ಶೇಖರಣೆಯಾಗಿದೆ. ಕೆಳಗಿನ 50% ಜನರ ಬಳಿ ಕೇವಲ 3% ಆಸ್ತಿಯಿದೆ. ಬಡವರಿಂದ ತೆರಿಗೆಯ ಹೆಸರಿನಲ್ಲಿ ಸುಲಿಗೆ ಮಾಡಿ ಶ್ರೀಮಂತ ಉದ್ಯಮಿಗಳಿಗೆ ಸಾಲ ಮನ್ನಾ, ತೆರಿಗೆ ಮನ್ನಾ ಹೆಸರಿನಲ್ಲಿ ಸಂಪತ್ತಿನ ವರ್ಗಾವಣೆ ನಡೆಯುತ್ತಿದೆ.
ಕಾರ್ಮಿಕರ ಹಕ್ಕುಗಳ ದಮನ:
ಮೋದಿ ಸರ್ಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ತಕ್ಷಣವೇ ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಸಂಚು ಮಾಡಿ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿದರು. ಕಾನೂನುಗಳನ್ನು ತೆಗೆದು ಸಂಹಿತೆ ಮಾಡಿದರು!! ಕೆಲಸದ ಅವಧಿಯನ್ನು ಹೆಚ್ಚಿಸಿದರು, ಖಾಯಂ ನೇಮಕಾತಿಯನ್ನು ಕೈಬಿಟ್ಟು ಗುತ್ತಿಗೆ, ಅರೆ ಗುತ್ತಿಗೆ ಪದ್ದತಿ ಜಾರಿಗೆ ತಂದರು. ಮುಷ್ಕರ ಮಾಡುವ ಹಕ್ಕನ್ನು ಮೊಟಕುಗೊಳಿಸಿದರು, ಮಾಲೀಕರು ಮನಬಂದಂತೆ ಲೇ ಆಫ್, ರಿಟ್ರೆಂಚ್ಮೆಂಟ್, ಕ್ಲೋಸರ್ ಮಾಡಲು ಅನುವು ಮಾಡಿಕೊಟ್ಟು ಕಾರ್ಪೋರೆಟ್ ಬಂಡವಾಳದಾರರಿಗೆ ಕಾರ್ಮಿಕರನ್ನು ಶೋಷಣೆ ಮಾಡಲು ದಾರಿ ಮಾಡಿಕೊಟ್ಟರು.
ಹೆಚ್ಚಿದ ಮಹಿಳೆಯರ, ದಲಿತರ ಮೇಲಿನ ದೌರ್ಜನ್ಯಗಳು:
ಮೋದಿ ಸರ್ಕಾರದ ಕಾಲಾವಧಿ ಎಂದರೆ ಮಹಿಳೆಯರು ಮತ್ತು ದಲಿತರ ಮೇಲೆ ಮಿತಿಮೀರಿದ ದೌರ್ಜನ್ಯದ ಅವಧಿ. 2017 - 2022ರ ನಡುವೆ ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳು ಶೇ. 26.35 ರಷ್ಟು ಹೆಚ್ಚಾಗಿವೆ. ಹತ್ರಾಸ್, ಬಿಲ್ಕಿಸ್ ಬಾನು ಪ್ರಕರಣಗಳಲ್ಲಿ ಆಳುವ ಸರ್ಕಾರದ ನಡೆ ಅತ್ಯಾಚಾರಿಗಳಿಗೆ ಯಾವುದೇ ಭಯ ಉಂಟು ಮಾಡಲಿಲ್ಲ. ಇಂತಹ ನಡವಳಿಕೆ ಮತ್ತಷ್ಟು ಅತ್ಯಾಚಾರಗಳಿಗೆ ಇಂಬು ನೀಡಿದೆ. ದಲಿತರ ಮೇಲಿನ ದೌರ್ಜನ್ಯಗಳೂ ಕೂಡ ಹೆಚ್ಚಾಗುತ್ತಲೇ ಇವೆ. ಹಲವು ನೆಪಗಳನ್ನು ಹೂಡಿ ಮಹಿಳೆಯರಿಗೆ ನೀಡಬೇಕಾದ ಮೀಸಲಾತಿಯನ್ನು ಮುಂದೂಡಲಾಗಿದೆ.
ಸಂಸತ್ತು, ಸಂವಿಧಾನ, ರಾಜ್ಯಗಳ ಹಕ್ಕುಗಳ ಮೇಲೆ ನಿರಂತರ ದಾಳಿ:
ಮೋದಿ ಸರ್ಕಾರ ಈ ಅವಧಿಯಲ್ಲಿ 146 ಸಂಸದರನ್ನು ಅಮಾನತು ಮಾಡಿದೆ. ಸರ್ಕಾರದ ವಿರುದ್ಧ ಗಟ್ಟಿಯಾಗಿ ಮಾತನಾಡುವ ಸಂಸದರನ್ನು ಅನರ್ಹಗೊಳಿಸುವ ಸಂಚು ನಡೆಸಲಾಗಿದೆ. ವಿರೋಧ ಪಕ್ಷಗಳ ಸದಸ್ಯರನ್ನು ಸಂಸತ್ತಿನ ಹೊರಗಿಟ್ಟು ತಮಗೆ ಬೇಕಾದ ಕಾನೂನುಗಳನ್ನು ಮಾಡಿಕೊಳ್ಳಲಾಗಿದೆ.
ಬಿಜೆಪಿ ನಾಯಕರು ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನು ಆಡುತ್ತಲೇ ಇದ್ದಾರೆ. ಸಂವಿಧಾನವನ್ನು ಬದಲಾಯಿಸಲು ಸಧ್ಯಕ್ಕೆ ಆಗದಿದ್ದರೂ ಸಾಂವಿಧಾನಿಕ ಸಂಸ್ಥೆಗಳಾದ ನ್ಯಾಯಾಲಯ, ಚುನಾವಣಾ ಆಯೋಗ ಇವುಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸಲಾಗಿದೆ.
ರಾಜ್ಯಗಳಿಗೆ ನೀಡಬೇಕಾದ ತೆರಿಗೆ ಪಾಲನ್ನು ನೀಡದೆ ಒಕ್ಕೂಟ ತತ್ವವನ್ನು ನಾಶ ಮಾಡಲಾಗುತ್ತಿದೆ. 14ನೇ ಹಣಕಾಸು ಆಯೋಗದ ಪ್ರಕಾರ ರಾಜ್ಯಕ್ಕೆ ಶೇ.42ರಷ್ಟು ತೆರಿಗೆ ಪಾಲನ್ನು ನೀಡಬೇಕು. ಆದರೆ 2022-23ರಲ್ಲಿ ಕೇವಲ ಶೇ.29.6ರಷ್ಟನ್ನು ಮಾತ್ರ ನೀಡಲಾಗಿದೆ. ಸೆಸ್ ಮತ್ತು ಸರ್ಚಾರ್ಜ್ ಹೆಸರಿನಲ್ಲಿ ಕೇಂದ್ರ ಸರ್ಕಾರ 2021-22ರಲ್ಲಿ 4.99 ಲಕ್ಷ ಕೋಟಿ ರೂಪಾಯಿ ಸಂಗ್ರಹ ಮಾಡಿಕೊಂಡಿದೆ. ವಿಧಾನ ಸಭೆಗಳ ಮಹತ್ವವನ್ನು ನಾಶ ಮಾಡುವ "ಒಂದು ದೇಶ, ಒಂದು ಚುನಾವಣೆ" ಪದ್ದತಿಯನ್ನು ಜಾರಿ ಮಾಡಲು ಹೊರಟಿದೆ.
ಹೆಚ್ಚಿದ ಕೋಮುವಾದಿ ಧ್ರುವೀಕರಣ:
ಮೇಲಿನ ಜ್ವಲಂತ ಮತ್ತು ಬದುಕಿನ ಪ್ರಶ್ನೆಗಳ ಬಗ್ಗೆ ಜನತೆ ಮಾತನಾಡದಂತೆ ಮಾಡಲು ಅವರನ್ನು ಮತಧರ್ಮದ ಆಧಾರದಲ್ಲಿ ವಿಭಜಿಸಲಾಗುತ್ತಿದೆ. ಜನರನ್ನು ದೇವರು, ಧರ್ಮದ ಹೆಸರಿನಲ್ಲಿ ಒಡೆದರೆ ಬಿಜೆಪಿ ಅಧಿಕಾರದಲ್ಲಿ ಮುಂದುವರಿಯಲು ಮತ್ತು ಆ ಅಧಿಕಾರವನ್ನು ಕಾರ್ಪೋರೆಟ್ ಶ್ರೀಮಂತರ ಪರವಾಗಿ ಬಳಸಲು ಅನುಕೂಲವಾಗುತ್ತದೆ. ಆದ್ದರಿಂದ ಜನರಲ್ಲಿ ಮತೀಯ ಭಾವನೆಗಳನ್ನು ಕೆರಳಿಸಲು ಅವರ ಆಹಾರ, ಉಡುಪು, ಭಾಷೆಯ ಮೇಲೆ ದಾಳಿ ಮಾಡಲಾಗುತ್ತಿದೆ. ಕನ್ನಡ ಭಾಷೆ ಕೂಡಾ ಇಂತಹ ದಾಳಿಗೆ ಒಳಗಾಗಿದೆ.
ಇಂತಹ ಕೋಮುವಾದಿ ಮತೀಯ ಶಕ್ತಿಗಳ ಜೊತೆ ಕೈ ಜೋಡಿಸಿರುವ ಜೆಡಿಎಸ್ ಕರ್ನಾಟಕದ ಜಾತ್ಯಾತೀತ ಮನಸ್ಸುಗಳಿಗೆ ದ್ರೋಹ ಬಗೆದಿದೆ. ಕೇವಲ ಒಂದೆರಡು ಸ್ಥಾನಕ್ಕಾಗಿ ತಾನೇ ನಂಬಿ ಪ್ರತಿಪಾದನೆ ಮಾಡುತ್ತಿದ್ದ ಮೌಲ್ಯಗಳನ್ನು ಗಾಳಿಗೆ ತೂರಿ ಸ್ವಾರ್ಥ ಮೆರೆಯುತ್ತಿದೆ. ಕೇವಲ ಅಧಿಕಾರಕ್ಕಾಗಿ ತಾನು ನಂಬಿದ ತತ್ವ ಮತ್ತು ತನ್ನನ್ನು ನಂಬಿದ್ದ ಜನರಿಗೆ ಜೆಡಿಎಸ್ ಮೋಸ ಮಾಡಿ ಅವಕಾಶವಾದಿ ವರ್ತನೆ ತೋರಿದೆ. ಕೋಮುವಾದಿಗಳ ಜೊತೆ ಕೈಜೋಡಿಸಿ ಸೌಹಾರ್ದವಾಗಿದ್ದ ಮಂಡ್ಯ ಜಿಲ್ಲೆಯ ಹೆಸರಿಗೆ ಮಸಿ ಬಳಿಯಲು ಜೆಡಿಎಸ್ ಪ್ರಯತ್ನಿಸಿದೆ.
ಆದ್ದರಿಂದ ಭಾರತ ಮತ್ತು ಭಾರತದ ಜನತೆಯನ್ನು ರಕ್ಷಣೆ ಮಾಡಲು ಕಾರ್ಪೋರೆಟ್ ಕೋಮುವಾದಿ ಶಕ್ತಿಗಳು ಮತ್ತು ಅವರ ಅವಕಾಶವಾದಿ ಮಿತ್ರರನ್ನು ಸೋಲಿಸಲೇಬೇಕಾಗಿದೆ. ಸೋಲಿಸುವ ಕೆಲಸ ಮಂಡ್ಯ ಜಿಲ್ಲೆಯಿಂದಲೇ ಆರಂಭವಾಗಲಿ ಎಂದು #ಕರ್ನಾಟಕ_ರಾಜ್ಯ_ಕಟ್ಟಡ_ಮತ್ತು_ಇತರೆ_ನಿರ್ಮಾಣ_ಕಾರ್ಮಿಕರ_ಪೆಡರೇಷನ್(ರಿ.) &
ಮಂಡ್ಯ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡುತ್ತದೆ.